Fri. Jul 4th, 2025

Mangaluru: ವಿವಿಧ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜಕರಿಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ – ಏನೆಲ್ಲಾ ಮಾರ್ಗಸೂಚಿಗಳಿವೆ..?

ಮಂಗಳೂರು:(ಜು.3) ನಗರದಲ್ಲಿ ಮುಂಬರುವ ಮೊಹರಂ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ
ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ. ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗೆಗಳನ್ನು ನಡೆಸಲು ಸಂಘಟಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಕಾನೂನು ಸುವ್ಯವಸ್ಥೆ. ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: ⭕ಮಣಿಪಾಲ : ರಸ್ತೆ ದಾಟುತ್ತಿದ್ದ ಮಹಿಳೆ ಬಸ್ಸಿನಡಿಗೆ ಬಿದ್ದು ಮೃತ್ಯು

ಮುಂಬರುವ ಮೊಹರಂ , ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ , ಗಣೇಶ ಚತುರ್ಥಿ , ಈದ್ ಮಿಲಾದ್ , ನವರಾತ್ರಿ ಶಾರದೋತ್ಸವ ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬಗಳ ಸಂದರ್ಭದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೆರವಣಿಗೆಗಳನ್ನು ಶಾಂತಿಯುತವಾಗಿ ಹಾಗೂ ಸುಸಂಘಟಿತವಾಗಿ ನಡೆಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಸಮಗ್ರ ನಿಯಮಾವಳಿಗಳನ್ನು ಸಿದ್ಧಪಡಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಮ ಆಯೋಜಿಸುವ ಎಲ್ಲಾ ಸಂಘಟಕರು ಮತ್ತು ಸಮಿತಿಗಳು ಅನುಮತಿ ಪಡೆಯುವ ಮುನ್ನ ಈ ಸಾಮಾನ್ಯ ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಾರ್ವಜನಿಕ ಸುರಕ್ಷತೆ, ಸುಗಮ ಸಂಚಾರ ವ್ಯವಸ್ಥೆ ಹಾಗೂ ಕಾನೂನು ಪಾಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

ಪ್ರತೀ ಹಬ್ಬಕ್ಕೆ ಸಂಬಂಧಿಸಿದಂತೆ, ಮೆರವಣಿಗೆ ಸಾಗುವ ಮಾರ್ಗ, ಸಮಯದ ನಿರ್ಬಂಧ, ಧ್ವನಿವರ್ಧಕಗಳ ಬಳಕೆಯ ಮಿತಿ ಹಾಗೂ ಇತರ ನಿರ್ದಿಷ್ಟ ಸೂಚನೆಗಳನ್ನು ಆಯಾ ಹಬ್ಬಗಳ ದಿನಾಂಕ ಸಮೀಪಿಸಿದಾಗ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆ ಈ ಕ್ರಮ ಕೈಗೊಂಡಿದೆ.


ಈ ಸಂಬಂಧ, ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಟಿಯಿಂದ ಈ ಕೆಳಗಿನ ಷರತ್ತುಗಳನ್ನು ಹೊರಡಿಸಲಾಗುತ್ತದೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಎಲ್ಲ ಆಯೋಜಕರು ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಹಬ್ಬದ ಮುಂಚಿತವಾಗಿ ನಿಖರವಾದ ಮಾರ್ಗಸೂಚಿಗಳನ್ನು (ರಸ್ತೆ, ಸಮಯ, ಧ್ವನಿ ನಿಯಂತ್ರಣ) ಹೊರಡಿಸಲಾಗುತ್ತದೆ. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಷರತ್ತುಗಳ ಉಲ್ಲಂಘನೆ ಅಥವಾ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರಲಿದೆ.

ನಿಯಮಗಳ ವಿವರ:

  1. ಕಡ್ಡಾಯ ಪೊಲೀಸ್ ಅನುಮತಿ ಮತ್ತು ಸಮಯದ ನಿರ್ಬಂಧ ಪಾಲನೆ:
    ಪೊಲೀಸ್ ಹಾಗೂ ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಯ ನಂತರ ಯಾವುದೇ ಮೆರವಣಿಗೆಯನ್ನು ನಡೆಸಲು ಅನುಮತಿಸಲಾಗದು. ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲೀಕರಿಂದ ನಿರಾಕ್ಷೇಪಣಾ ಪತ್ರ’ (NOC) ಪಡೆದು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅನುಮೋದಿತ ಸ್ಥಳ ಅಥವಾ ಮಾರ್ಗದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಯಾವುದೇ ವ್ಯತಿರಿಕ್ತತೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ಉಲ್ಲಂಘನೆ: ಭಾರತೀಯ ನ್ಯಾಯ ಸಂಹಿತ 2023 ರ ಕಲಂ: 189 (ಕಾನೂನುಬಾಹಿರ ಕೂಟ) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ: 92(1) (ಸಾರ್ವಜನಿಕ ಶಾಂತಿಯ ಉಲ್ಲಂಘನೆ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

  1. ಡಿಜೆ ಸಂಪೂರ್ಣ ನಿಷೇಧ: ಧ್ವನಿವರ್ಧಕಗಳಿಗೆ ಅನುಮತಿ ಅಗತ್ಯ:
    ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯುವುದು ಅಗತ್ಯವಿದೆ ಮತ್ತು ರಾತ್ರಿ 10:00 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಟ್ಟಗಳು ಈ ಮಿತಿಗಳ ಒಳಗಿರಬೇಕು: ವಾಣಿಜ್ಯ ಪ್ರದೇಶ – 65 ಡೆಸಿಬಲ್, ವಾಸಸ್ಥಳ – 55 ಡೆಸಿಬಲ್, ನಿಶ್ಯಬ್ದ ವಲಯ – 50 ಡೆಸಿಬಲ್.

ಉಲ್ಲಂಘನೆ: ಕಲಂ: 270 ಮತ್ತು ಕಲಂ: 223 ಭಾರತೀಯ ನ್ಯಾಯ ಸಂಹಿತೆ 2023 (ಸಾರ್ವಜನಿಕ ಉಪದ್ರವ ಮತ್ತು ಆದೇಶಕ್ಕೆ ಅವಿಧೇಯತೆ), ಪರಿಸರ ಸಂರಕ್ಷಣಾ ಕಾಯ್ದೆ 1986 ರ ಕಲಂ: 15, ಶಬ್ದ ಮಾಲಿನ್ಯ ನಿಯಮಗಳು 2000, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 31 ಮತ್ತು ಸ್ಫೋಟಕಗಳ ಕಾಯ್ದೆ 1884 ಅಡಿಯಲ್ಲಿ ಕ್ರಮ.

3.247 ಭದ್ರತೆ ಮತ್ತು ಸಿಸಿಟಿವಿ ಕಡ್ಡಾಯ: ಆಯೋಜಕರು ಸ್ಥಳದಲ್ಲಿ 247 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು.


ಉಲ್ಲಂಘನೆ: ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 31, 34, 70 ಮತ್ತು ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕ್ರಮಗಳು (ಕ್ರಮಗಳು) ಕಾಯ್ದೆ. 2017 ರ ಕಲಂ: 3(I) ಮತ್ತು 6 ಅಡಿಯಲ್ಲಿ ಕ್ರಮ.

  1. ಧಾರ್ಮಿಕ ವಿರೋಧಿ ಘೋಷಣೆಗಳು ಮತ್ತು ದ್ವೇಷ ಭಾಷಣ ನಿಷೇಧ (ಮುದ್ರಣ & ಸಾಮಾಜಿಕ ಮಾಧ್ಯಮದಲ್ಲಿ):

ಯಾವುದೆ ಘೋಷಣೆಗಳು, ಭಿತ್ತಿಪತ್ರಗಳು. ಪ್ರದರ್ಶನಗಳು ಅಥವಾ ಸೋಷಿಯಲ್‌ ಮೀಡಿಯಾ ಪೋಸ್ಟ್ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿರಬಾರದು.
ಉಲ್ಲಂಘನೆ: ಕಲಂ: 196 (ದ್ವೇಷಭಾವನೆ ಉಂಟುಮಾಡುವುದು), 299 (ಧಾರ್ಮಿಕ ನಂಬಿಕೆಗೆ ಅಪಮಾನ), 352/353 (ಸಾರ್ವಜನಿಕ ಕೇಡು) BNS 2023 ಅಡಿಯಲ್ಲಿ ಕ್ರಮ.

  1. ಜನಸಂದಣಿಗೆ ಕಡ್ಡಾಯ ಸ್ವಯಂಸೇವಕರ ನೇಮಕಾತಿ:
    ಅನುಮತಿತ ಸಾಮರ್ಥ್ಯ ಮೀರದಂತೆ ಜನಸಮೂಹ ನಿಯಂತ್ರಿಸಬೇಕು. ಸಮರ್ಪಕವಾಗಿ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು.

ಉಲ್ಲಂಘನೆ: ಕಲಂ: 125 BNS 2023 (ಇತರರ ದೈಹಿಕ ಸುರಕ್ಷತೆಗೆ ಅಪಾಯ), ಕಲಂ: 92 ಮತ್ತು ಕಲಂ: 30 ಕರ್ನಾಟಕ ಪೊಲೀಸ್ ಕಾಯ್ದೆ 963 ಅಡಿಯಲ್ಲಿ ಕ್ರಮ.

  1. ಪೆಂಡಾಲ್ ಎತ್ತರ ನಿಯಮಗಳು ಮತ್ತು ವಾಹನ ಸುರಕ್ಷಾ ನಿಯಮ ಪಾಲನೆ:
    ಪೆಂಡಾಲ್, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳು ಇತ್ಯಾದಿಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು. ವಾಹನಗಳು ನೋಂದಣಿ ಪತ್ರ, ದೃಢತೆ ಪ್ರಮಾಣಪತ್ರ, ವಿಮೆ ಮತ್ತು PUC ಪ್ರಮಾಣ ಪತ್ರ ಹೊಂದಿರಬೇಕು.
    ಉಲ್ಲಂಘನೆ: BNS 2023 ರ ಕಲಂ: 125 ಹಾಗೂ ಮೋಟಾರು ವಾಹನ ಕಾಯ್ದೆ 2019 ರ ಕಲಂ: 39, 130, 192 ಅಡಿಯಲ್ಲಿ ಕ್ರಮ.
  2. ಅಗ್ನಿಶಾಮಕ ಮತ್ತು ತುರ್ತು ವ್ಯವಸ್ಥೆಗಳ ಒದಗಿಕೆ:
    ಅಗ್ನಿ ನಂದಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿವೆ. ಬೆಂಕಿಯ ಮೂಲಗಳ ಬಳಿಯಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಇರಿಸಬಾರದು.
    ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು, ಏಕ ಬಳಕೆ ಪ್ಲಾಸ್ಟಿಕ್ ನಿಷೇದಿಸಿದೆ.
    ಉಲ್ಲಂಘನೆ: BNS 2023 ರ ಕಲಂ:125, 287 ಮತ್ತು ಪರಿಸರ ಕಾಯ್ದೆ 1986 ರ ಕಲಂ:15, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು 2016 ಅಡಿಯಲ್ಲಿ ಕ್ರಮ.
  3. ವಾಹನ ಸಂಚಾರ ಮುಕ್ತವಾಗಿ ನಿರ್ವಹಣೆ ಮತ್ತು ತುರ್ತು ಮಾರ್ಗಗಳ ನಿರ್ಬಂಧ:
    ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡ ಉಂಟುಮಾಡಬಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.
    ಉಲ್ಲಂಘನೆ: BNS 2023 ರ ಕಲಂ: 126(2), 285, 194E ಮತ್ತು ಮೋಟಾರು ವಾಹನ ಕಾಯ್ದೆ 2019 ರ ಕಲಂ122, 201 ಅಡಿಯಲ್ಲಿ ಕ್ರಮ.
  4. ಸಾರ್ವಜನಿಕ/ಖಾಸಗಿ ಆಸ್ತಿಗೆ ಹಾನಿ ಮಾಡಬಾರದು:
    ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟುಮಾಡಬಾರದು.
    ಉಲ್ಲಂಘನೆ: BNS 2023 ರ ಕಲಂ:117/118, 324/326 ಮತ್ತು ಕರ್ನಾಟಕ ಸಾರ್ವಜನಿಕ ಆಸ್ತಿ ಹಾನಿ ತಡ
    ಕಾಯ್ದೆ 1984 ರ ಕಲಂ: 3 ಅಡಿಯಲ್ಲಿ ಕ್ರಮ.
  5. ಸಮಯ, ಕಾರ್ಯಕ್ರಮ ವಿವರ ಮತ್ತು ಪೊಲೀಸ್ ಸೂಚನೆ ಪಾಲನೆ:
    ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪೊಲೀಸ್ ಸೂಚನೆಗಳನ್ನು ಪಾಲಿಸಬೇಕು.

    ಉಲ್ಲಂಘನೆ: ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 92 ಮತ್ತು BNS 2023 ರ ಕಲಂ: 221 ಅಡಿಯಲ್ಲಿ ಕ್ರಮ.
  6. ಮಹಿಳೆಯರ ಸುರಕ್ಷತೆಗೆ ಶೂನ್ಯ ಸಹಿಮ್ಮತೆ ನೀತಿ:
    ಕಾರ್ಯಕ್ರಮದ ಸಮಯ ಮಹಿಳೆಯರ ಚುಡಾವಣೆ, ಹಿಂಬಾಲಿಸುವುಕೆ. ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತೆ ನೋಡಿಕೊಳ್ಳಬೇಕು.
    ಉಲ್ಲಂಘನೆ: BNS 2023 ರ ಕಲಂ: 74, 75, 77, 78 ಅಡಿಯಲ್ಲಿ ಕ್ರಮ.
  7. ಸ್ವಚ್ಛತೆ, ಪ್ಲೆಕ್ಸ್ ಮತ್ತು ಬ್ಯಾನ‌ರ್ ನಿಯಂತ್ರಣ:
    ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.
    ಉಲ್ಲಂಘನೆ: ಕರ್ನಾಟಕ ತೆರೆದ ಸ್ಥಳ (ಅಲಂಕಾರ ತಡೆಯುವಿಕೆ) ಕಾಯ್ದೆ 1981 BNS 2023 ರ ಕಲಂ: 196, ಪರಿಸರ ಕಾಯ್ದೆ 1986 ರ ಕಲಂ: 15 ಮತ್ತು MCC ಕಸ ನಿರ್ವಹಣಾ ನಿಬಂಧನೆಗಳು ಅಡಿಯಲ್ಲಿ ಕ್ರಮ.
  8. ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿಯಾದ ವಸ್ತುಗಳ ನಿಷೇಧ:
    ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.
    ಉಲ್ಲಂಘನೆ: Arms Act 1959 ರ ಕಲಂ: 25 ಅಡಿಯಲ್ಲಿ ಕ್ರಮ.
  9. ಡ್ರೋನ್ ಬಳಸಲು ಮುಂಚಿತ ಅನುಮತಿ ಕಡ್ಡಾಯ:
    ಮುಂಚಿತ ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ UAV ಬಳಸುವುದು ನಿಷಿದ್ದ.
    ಉಲ್ಲಂಘನೆ: ಡ್ರೋನ್ ನಿಯಮಗಳು 2021 ರ ನಿಯಮ 49 ಅಡಿಯಲ್ಲಿ ಕ್ರಮ.
  10. ಮೆರವಣಿಗೆಯಲ್ಲಿ ಪ್ರಾಣಿಗಳ ಬಳಕೆಗೆ ನಿಯಂತ್ರಣ:
    ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯ.
    ಉಲ್ಲಂಘನೆ: ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ: 11 ಮತ್ತು 22 ಅಡಿಯಲ್ಲಿ ಕ್ರಮ.
  11. ಪೊಲೀಸ್ ತಪಾಸಣೆಗೆ ಅಡ್ಡಿ ಮಾಡುವುದು ನಿಷೇಧ:
    ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು.
    ಉಲ್ಲಂಘನೆ: BNS 2023 ರ ಕಲಂ: 221 ಅಡಿಯಲ್ಲಿ ಕ್ರಮ.
  12. ಅನುಮಾನಾಸ್ಪದ ಚಟುವಟಿಕೆಗಳ ವರದಿ ನೀಡುವುದು ಕಡ್ಡಾಯ:
    ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ. ಸುಳ್ಳು ಮಾಹಿತಿ ಅಥವಾ ಗಲಭೆಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆಮಾಡಿ ವರದಿ ಮಾಡಬೇಕು.
    ಉಲ್ಲಂಘನೆ: BNS 2023 ರ ಕಲಂ 217 ಅಡಿಯಲ್ಲಿ ಕ್ರಮ.

ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986. ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000,
ಶಸ್ತ್ರಾಸ್ತ್ರ ಕಾಯ್ದೆ 1959, ಡ್ರೋನ್ ನಿಯಮಗಳು 2021, ಸ್ಫೋಟಕಗಳ ಕಾಯ್ದೆ 1884 ಮತ್ತು ಇತರ ಸಂಬಂಧಿತ ಕಾನೂನುಗಳ
ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು.

Leave a Reply

Your email address will not be published. Required fields are marked *