Tue. Oct 14th, 2025

Belthangady: ಸಿಯೋನ್ ಆಶ್ರಮ (ರಿ.)ದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಬೆಳ್ತಂಗಡಿ: (ಅ.11) ಸಿಯೋನ್ ಆಶ್ರಮ(ರಿ.) ಗಂಡಿಬಾಗಿಲು ಇಲ್ಲಿ ದಿನಾಂಕ:10.10.2025ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನಲಂಕರಿಸಿದ್ದ ಸಿಯೋನ್ ಅಶ್ರಮದ ಮ್ಯಾನೇಜಿಂಗ್ ಟ್ರಸ್ಟೀಯವರಾದ ಶ್ರೀಯುತ ಡಾ.ಯು.ಸಿ.ಪೌಲೋಸ್ ರವರು ಮಾತನಾಡಿ, ಮಾನಸಿಕ ಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ⭕ಮೈಸೂರು: ಕಾಮುಕನ ಕಾಲಿಗೆ ಗುಂಡು ಹೊಡೆದ ನಿಜವಾದ ಹೀರೋ ಇವ್ರೇ ನೋಡಿ

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಮಾನಸಿಕ ಆರೋಗ್ಯವಿಲ್ಲದಿದ್ದರೆ ಒಬ್ಬ ಮನುಷ್ಯ ನೆಮ್ಮದಿಯಾಗಿ, ಸುಖವಾಗಿ ಬಾಳಲು ಸಾಧ್ಯವಿಲ್ಲ. ಇದಕ್ಕೆ ಧ್ಯಾನ ಮತ್ತು ದೈವಿಕ ಶಕ್ತಿಯು ಮುಖ್ಯ ಪಾತ್ರ ವಹಿಸುತ್ತದೆ. ಪ್ರೀತಿ ಮತ್ತು ತಿಳುವಳಿಕೆಯಿಂದ ಪರಸ್ಪರರ ಮಾನಸಿಕ ಆರೋಗ್ಯವನ್ನು ಬೆಂಬಲಿಸೋಣ ಎಂದರು.

ಅತಿಥಿಗಳಾಗಿ ವೇದಿಕೆಯನ್ನಲಂಕರಿಸಿದ್ದ ಶ್ರೀನಿವಾಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಮಂಗಳೂರಿನ ಉಪನ್ಯಾಸಕರಾದ ಶ್ರೀಯುತ ಸನಲ್ ಪ್ರಮೋದ್ ರವರು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿ, ಮಾನಸಿಕ ಆರೋಗ್ಯವಾಗಿರುವ ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾನೆ ಎಂದರು.

ಸಿಯೋನ್ ಸಂಸ್ಥೆಯ ವೈದ್ಯಾಧಿಕಾರಿ ಶ್ರೀಯುತ ಡಾ.ಶಿವಾನಂದ ಸ್ವಾಮಿಯವರು, ಒಬ್ಬ ವ್ಯಕ್ತಿಗೆ ಮಾನಸಿಕ ಕಾಯಿಲೆ ಬರಬಹುದಾದ ಸಾಧ್ಯತೆಗಳ ಕಾರಣಗಳು, ವಿಧಗಳು, ಲಕ್ಷಣಗಳು, ಪರಿಹಾರಗಳನ್ನು ವಿವರಿಸಿ, ದೈಹಿಕವಾಗಿ ನಾವೆಷ್ಟೇ ಆರೋಗ್ಯವಾಗಿದ್ದರೂ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಎಲ್ಲವೂ ಶೂನ್ಯ. ನಮ್ಮ ಜೀವನದಲ್ಲಿ ನಾವು ಸದೃಢರಾಗಿರಬೇಕೆಂದರು. ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ., ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ., ಹಣಕಾಸು ವ್ಯವಸ್ಥಾಪಕಿ ಶ್ರೀಮತಿ ಸೌಮ್ಯ ಯು.ಪಿ., ಆಶ್ರಮ ನಿವಾಸಿಯಾದ ನಾಗವೇಣಿಯವರು ವೇದಿಕೆಯನ್ನಲಂಕರಿಸಿದ್ದರು.


ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು, ಶ್ರೀನಿವಾಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ನ ವಿದ್ಯಾರ್ಥಿಗಳು, ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಶ್ರೀಮತಿ ದಿನವತಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಶ್ರೀಮತಿ ಸಿಂಧು ವಿ.ಎಂ. ಸ್ವಾಗತಿಸಿ, ಸಿಬ್ಬಂದಿ ಶ್ರೀಮತಿ ಆಶಾ ಸುಧಾಕರ್ ವಂದಿಸಿದರು. ಶ್ರೀನಿವಾಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಮಂಗಳೂರಿನ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು.

Leave a Reply

Your email address will not be published. Required fields are marked *