ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ದೀಪ ಬೆಳಗಿಸಿ ಉದ್ಘಾಟಿಸಿದರು.

ಇದನ್ನೂ ಓದಿ: ❇ಕೊರಿಂಜ: ಶ್ರೀ ಪಂಚಲಿಂಗೇಶ್ವರ ಭಜನಾ ತಂಡಕ್ಕೆ ಸಮವಸ್ತ್ರ ವಿತರಣಾ ಕಾರ್ಯಕ್ರಮ
ಬಳಿಕ ಮಾತನಾಡಿದ ಅವರು ಶಾಲಾ ಪ್ರತಿಭಾ ದಿನಾಚರಣೆಯ ಅಗತ್ಯತೆ ಹಾಗೂ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವ ರೀತಿಯನ್ನು ವಿವರಿಸಿ, ಪ್ರತಿಭಾ ದಿನ ವಿದ್ಯಾರ್ಥಿಗಳಿಗೆ ಅವಕಾಶಗಳ ಕಲ್ಪಿಸಿಕೊಡುವ ವೇದಿಕೆ ಎಂದರು.
ಇದೇ ಸಂದರ್ಭ ವೇದಿಕೆಯಲ್ಲಿ 2024-25 ನೇ ಸಾಲಿನ ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ, ರಾಜ್ಯ ಮಟ್ಟದ ಚೆಸ್ ಪಂದ್ಯಾಟ ದಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಏಳನೇ ತರಗತಿಯ ವಿದ್ಯಾರ್ಥಿ ಸಮರ್ಥ್ ಭಟ್ ಇವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾ ಕೇಸರಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗಿರುವ ಶ್ರೀಮತಿ ಗಾಯತ್ರಿ , ಶಾಲಾ ಸಂಚಾಲಕರಾದ ಶ್ರೀಯುತ ಅನಂತಪದ್ಮನಾಭ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ. ವಿ ಉಪಸ್ಥಿತರಿದ್ದರು.
ಡಾ. ಹೇಮಾವತಿ ವಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ ತಯಾರಿಸಲಾದ ಶಾಲಾ ಹಸ್ತಪ್ರತಿ ಪತ್ರಿಕೆ ಕನಸು ಮತ್ತು ಟ್ಯಾಲೆಂಟ್ ಎಸ್.ಡಿ.ಎಂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಯುತ ಧನ್ಯ ಕುಮಾರ್ ಹಾಗೂ ಶ್ರೀಯುತ ಜೀವಂದರ್ ಕುಮಾರ್ ಅನಾವರಣಗೊಳಿಸಿದರು. ವಿದ್ಯಾರ್ಥಿಗಳು ವಿವಿಧ ಪ್ರಕಾರದ ನೃತ್ಯಗಳು ಹಾಡು, ರಂಗಗೀತೆ, ನೃತ್ಯ ರೂಪಕ, ಯೋಗ ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.


ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಧರ್ಮಸ್ಥಳದ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು, ನಿಡ್ಲೆ ವಲಯದ ಸಮುದಾಯ ಸಂಪನ್ಮೂಲ ಅಧಿಕಾರಿಯಾಗಿರುವ ಶ್ರೀಮತಿ ಪ್ರತಿಮ ಹಾಗೂ ಊರ ಪರವೂರ ಗಣ್ಯಾತಿಗಣ್ಯರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕ ಕಾರ್ತಿಕೇಶ್ ವಂದಿಸಿದರು.



