ಅಳದಂಗಡಿ: ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಇಂದು ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ಸುಮಾರು 13 ಅಡಿ ಉದ್ದದ ಈ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.


ಅಳದಂಗಡಿಯ ನಿವಾಸಿ ವೀರೇಂದ್ರ ಜೈನ್ ಎಂಬವರ ತೋಟದಲ್ಲಿ ಈ ಘಟನೆ ನಡೆದಿದೆ. ತೋಟದ ಕೆಲಸದ ವೇಳೆ ಅನಿರೀಕ್ಷಿತವಾಗಿ ಈ ಬೃಹತ್ ಹಾವು ಕಾಣಿಸಿಕೊಂಡಿದ್ದು, ಕೂಡಲೇ ಮನೆಯವರು ಭಯಭೀತರಾಗಿದ್ದಾರೆ. ಕಾಳಿಂಗ ಸರ್ಪದ ಗಾತ್ರ ಕಂಡು ಆತಂಕಗೊಂಡ ಮನೆಯವರು ತಕ್ಷಣವೇ ಲಾಯಿಲದ ಖ್ಯಾತ ಉರಗ ತಜ್ಞ ಸ್ನೇಕ್ ಅಶೋಕ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.


ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್ ಕುಮಾರ್ ಅವರು, ಅತ್ಯಂತ ಜಾಗರೂಕತೆಯಿಂದ ಸುಮಾರು 13 ಅಡಿ ಉದ್ದದ ಈ ಬೃಹತ್ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಹಾನಿಯಾಗದಂತೆ ಹಾವನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.








