Fri. Mar 14th, 2025

Mangaluru: ನೆರೆಮನೆಯಾತನ ಮೇಲೆ ದ್ವೇಷ – ಬೈಕಿಗೆ ಡಿಕ್ಕಿ ಮಾಡಲು ಹೋಗಿ ಪಾದಚಾರಿಗೆ ಡಿಕ್ಕಿ ಹೊಡೆದ ಕಾರು – ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್​ ಮೇಲೆ ನೇತಾಡಿದ ಮಹಿಳೆ

ಮಂಗಳೂರು (ಮಾ.14): ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್​ ಮೇಲೆ ನೇತಾಡಿರುವ ಎದೆ ಝಲ್ ಎನಿಸುವ ಭೀಕರ ಅಪಘಾತ ಮಂಗಳೂರು ನಗರದಲ್ಲಿ ನಡೆದಿದೆ.

ಮುರಳಿ ಪ್ರಸಾದ್ ಎನ್ನುವಾತ ಬೈಕ್​ ನಲ್ಲಿ ತೆರಳುತ್ತಿದ್ದು, ಈತನಿಗೆ ಗುದ್ದಿ ಹತ್ಯೆ ಮಾಡುವ ಪ್ಲ್ಯಾನ್ ಇತ್ತು. ಆದ್ರೆ, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಕಾರು ಗುದ್ದಿದೆ. ಪರಿಣಾಮ ಮಹಿಳೆ ಕಾಂಪೌಂಡ್​ ಮೇಲೆ ಬಿದ್ದು ನೇತಾಡಿದ್ದಾಳೆ. ಬಳಿಕ ಸ್ಥಳೀಯರು ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾರು ಚಾಲಕ ಸತೀಶ್ ಕುಮಾರ್​​ ಈ ಕೃತ್ಯ ಎಸಗಿದ್ದಾನೆ. ಅದೃಷ್ಟವಶಾತ್​ ಮಹಿಳೆ ಬದುಕಿದ್ದಾಳೆ.

2023ರಿಂದ ಅಕ್ಕಪಕ್ಕದ ಮನೆಯವರ ನಡುವೆ ತಕರಾರು ಇದ್ದು, ಇದೇ ವಿಚಾರಕ್ಕೆ ಮುರಳಿ ಪ್ರಸಾದ್​ನನ್ನು ಕೊಲ್ಲಲು ಸತೀಶ್ ಕುಮಾರ್​​ ಸ್ಕೆಚ್ ಹಾಕಿದ್ದ. ಅದರಂತೆ ಮಾರ್ಚ್​ 13 ರಂದು ಮುರಳಿ ಪ್ರಸಾದ್​ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ. ಆದ್ರೆ, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ.

ಈ ಸಂಬಂಧ ಕಾರು ಚಾಲಕ ಸತೀಶ್ ಕುಮಾರ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಇನ್ನು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲೂ ಸಹ ಹಿಟ್ ಆ್ಯಂಡ್​ ರನ್ ಕೇಸ್ ಬುಕ್ ಆಗಿದೆ. ಇನ್ನು ಈ ಅಪಘಾತದ ವಿಡಿಯೋ ನೋಡಿದರೆ ಒಂದು ಕ್ಷಣ ಎದೆ ಝಲ್ ಎನ್ನುತ್ತೆ. ಅದೃಷ್ಟವಶಾತ್​ ಮಹಿಳೆ ಬದುಕುಳಿದಿದ್ದಾಳೆ.

Leave a Reply

Your email address will not be published. Required fields are marked *