ಬೆಳ್ತಂಗಡಿ:(ಜು.2) ಜನತೆಗೆ ಆರೋಗ್ಯವನ್ನು ನೀಡುವ ಹಿತ ದೃಷ್ಟಿಯಿಂದ ತನ್ನ ಆಯುಷ್ಯದ ಬಹುಭಾಗವನ್ನು ಜನಸೇವೆಗಾಗಿ ಮುಡಿಪಾಗಿಡುವ ಒಂದು ಸಮೂಹವೇ ವೈದ್ಯ ಸಮೂಹ. ಜುಲೈ ಒಂದರಂದು ಆಚರಿಸುವ ವೈದ್ಯರ ದಿನದ ಪ್ರಯುಕ್ತ ಮನ್ಶರ್ ಸಂಸ್ಥೆಯ ಸಂಸ್ಥಾಪಕ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ನಿರ್ದೇಶನದಂತೆ ಮನ್ಶರ್ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಶುಭ ಹಾರೈಸುವ ಮೂಲಕ ಆಚರಿಸಿದರು.

ಈ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಸೇವೆ, ಈ ಸೇವೆಯಲ್ಲಿ ಎದುರಾಗುವ ಕಷ್ಟಪಾಡುಗಳು, ಅವರ ಪರಿಶ್ರಮ, ಹೇಗೆ ವೈದ್ಯರಾಗಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂವಾದವೂ ನಡೆಯಿತು. ಮುಖ್ಯವಾಗಿ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ ಭೇಟಿ ನೀಡಿ, ಗುಡ್ಡಕಾಡು ಪ್ರದೇಶದ ಜನತೆಗೆ ಆರೋಗ್ಯ ಸೇವೆಯನ್ನು ಒದಗಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ವೈದ್ಯ ದಂಪತಿಗಳಾದ ಡಾ. ಮುರಳಿಕೃಷ್ಣ ಇರ್ವತ್ರಾಯ, ವಂದನಾ ಇರ್ವತ್ರಾಯ ರವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು.

ಡಾ ಅಲ್ಬಿನ್ ರವರು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದ ವೃತ್ತಿಯ ಉಜ್ವಲ ಭವಿಷ್ಯ ದ ಬಗ್ಗೆ ತಿಳಿಹೇಳಿದರು.
ನಂತರ ಗುರುವಾಯನಕೆರೆ ಜೈನ್ ಪೇಟೆ ಯಲ್ಲಿರುವ ಡಾ ಶ್ರೀಹರಿ ನಿರ್ದೇಶನದ ಅಭಯ ಆಸ್ಪತ್ರೆ ಗೆ ಭೇಟಿ ನೀಡಿ ಕರ್ತವ್ಯ ನಿರತ ವೈದ್ಯರಿಗೆ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ರವರು ಭಾಗಿಯಾಗಿದ್ದರು. ಬದ್ಯಾರಿನ ಪ್ರಸಿದ್ಧ ಫಾದರ್ ಎಲ್. ಎಂ. ಪಿಂಟೋ ಆಸ್ಪತ್ರೆ ಗೆ ಭೇಟಿ ನೀಡಿ ಅಲ್ಲಿನ ಕರ್ತವ್ಯ ನಿರತ ವೈದ್ಯರಿಗೆ ಹೂಗುಚ್ಚ ನೀಡಿ ಶುಭವನ್ನು ಕೋರಲಾಯಿತು. ಮನ್ಶರ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಹೈದರ್ ಮರ್ದಾಳ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ರಶೀದ್ ಕುಪ್ಪೆಟ್ಟಿ ಹಾಗೂ ಪ್ಯಾರಾಮೆಡಿಕಲ್ ಉಪನ್ಯಾಸಕಿ ಪವಿತ್ರಾ ಎಚ್ ಭಾಗವಹಿಸಿದ್ದರು.


