Dileep Raj: ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪತಿಯ ಜೊತೆ ಕಳೆದ 25 ವರ್ಷಗಳಿಂದ ಸಂಸಾರ ನಡೆಸಿಕೊಂಡು ಬರುತ್ತಿದ್ದ ಪತ್ನಿ ಶ್ರೀವಿದ್ಯಾ ಅವರ ಮನಸ್ಸು ಒಡೆದುಹೋಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಬೆಂಬಲವಾಗಿ ನಿಂತವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ದಿಲೀಪ್ ನೆನಪಿನ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ.
“ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ದಿಲೀಪ್ ಅವರು ಕಲೆ, ಸಿನಿಮಾ ಮತ್ತು ನಾವು ಇನ್ನು ಮುಂದೆ ಅನುಭವಿಸುವ ಪ್ರತಿಯೊಂದು ದಯೆಯ ರೂಪದಲ್ಲಿ ನಮ್ಮೊಂದಿಗೇ ಇರುತ್ತಾರೆ” ಎಂದು ಅವರು ಬರೆದುಕೊಂಡಿದ್ದಾರೆ.
“ಮತ್ತೆ ನೋಡುವವರೆಗೂ ಶಾಂತಿ ಇಲ್ಲ”:
ಪತಿಯನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸುತ್ತಾ, “ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಗೆ ಹೊಸ ಜೀವನ ಸಿಗಲಿ. ಆದರೆ ಒಂದು ವಿಷಯ ಮಾತ್ರ ಖಚಿತ – ನಾನು ಅವರನ್ನು ಮತ್ತೆ ನೋಡುವವರೆಗೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ” ಎಂದು ಬರೆಯುವ ಮೂಲಕ ಪತಿಯ ಮೇಲಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಕೇವಲ ದಂಪತಿಗಳಾಗಿ ಮಾತ್ರವಲ್ಲದೆ, ವೃತ್ತಿಜೀವನದಲ್ಲೂ ಪರಸ್ಪರ ಬೆಂಬಲವಾಗಿ ನಿಂತಿದ್ದರು. ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳನ್ನು ಈ ಜೋಡಿ ಜೊತೆಯಾಗಿ ನಿರ್ಮಿಸಿತ್ತು. ದಿಲೀಪ್ ನಿಧನದ ನಂತರ ಅವರ ಪತ್ನಿಯ ಈ ಪೋಸ್ಟ್ ಕಂಡು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅವರಿಗೆ ಬೆಂಬಲ ಸೂಚಿಸಿದ್ದಾರೆ.






