ಕಾಸರಗೋಡು: ಮದುವೆಯಾಗಿ ನವಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು, ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಕೇಡಿಸುವ ಘಟನೆಯೊಂದು ಕಾಸರಗೋಡಿನಲ್ಲಿ ನಡೆದಿದೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಅಶ್ವತಿ ಪಿ.ವಿ. ಮೃತಪಟ್ಟ ದುರ್ದೈವಿ.


ಕುಟ್ಟಿಕೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇತೂರುಪಾರದ ವಟ್ಟಂತಟ್ಟ ನಿವಾಸಿಯಾದ ಪುಷ್ಪಾ ಮತ್ತು ದಿವಂಗತ ಸುಕು ದಂಪತಿಯ ಪುತ್ರಿ ಅಶ್ವತಿ, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಕಳೆದ ಏಪ್ರಿಲ್ 5 ರಂದು ಕೊಡೋಂ-ಬೇಲೂರು ಗ್ರಾಮ ಪಂಚಾಯತ್ನ ಬಳಿಯ ಚೀತಕ್ಕಾವು ಮೂಲದ ಹತ್ತಿರದ ಸಂಬಂಧಿ ರೂಪೇಶ್ ಎಂಬುವವರೊಂದಿಗೆ ವಿವಾಹವಾಗಿತ್ತು.
ಮದುವೆಯಾಗಿ ಅತ್ಯಂತ ಸಂತೋಷದಿಂದ ಇರಬೇಕಾಗಿದ್ದ ಯುವತಿ, ಮೇ 18 ರಂದು ಕಾಸರಗೋಡು ಪಟ್ಟಣದ ಮನೆಯಲ್ಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷ ಸೇವಿಸಿ ಅಶ್ವತಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ, ಅವರನ್ನು ತಕ್ಷಣವೇ ಪರಿಯಾರಂನಲ್ಲಿರುವ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಾಸರಗೋಡು ಪಟ್ಟಣ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಶ್ವತಿ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದರಿಂದ ಕೌಟುಂಬಿಕ ಕಲಹಗಳು, ಅಥವಾ ತೀವು ಮಾನಸಿಕ ಒತ್ತಡವೇನಾದರೂ ಇತ್ತೇ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





