ಬೆಳ್ತಂಗಡಿ: ಬೆಳ್ತಂಗಡಿ: ಹುತ್ತಕ್ಕೆ ಕೈಹಾಕಿ ಜೇನು ತೆಗೆಯುತ್ತಿದ್ದ ವೇಳೆ ಯಾವುದೋ ವಿಷಜಂತು ಕಚ್ಚಿ, ಚಿಕಿತ್ಸೆ ಪಡೆಯಲು ನಿರಾಕರಿಸಿದ ವ್ಯಕ್ತಿಯೊಬ್ಬರು ಮನೆಯಲ್ಲೇ ಮೃತಪಟ್ಟ ಘಟನೆ ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ಎಂಬಲ್ಲಿ ನಡೆದಿದೆ.

ಅರ್ಕಿಜಡ್ಡ ನಿವಾಸಿ ಕೃಷ್ಣಪ್ಪ ಮೂಲ್ಯ (63) ಮೃತಪಟ್ಟ ದುರ್ದೈವಿ. ಸುಮಾರು 15 ದಿನಗಳ ಹಿಂದೆ ಕೃಷ್ಣಪ್ಪ ಅವರು ಜೇನು ತೆಗೆಯಲು ಹುತ್ತಕ್ಕೆ ಕೈ ಹಾಕಿದ್ದರು. ಈ ಸಂದರ್ಭದಲ್ಲಿ ಅವರ ಎಡಕೈಗೆ ಯಾವುದೋ ವಿಷಜಂತು ಕಚ್ಚಿ ತೀವ್ರವಾಗಿ ಗಾಯವಾಗಿತ್ತು. ಪರಿಣಾಮವಾಗಿ ಕೈ ವಿಪರೀತ ಬಾತುಕೊಂಡಿತ್ತಾದರೂ, ಕೃಷ್ಣಪ್ಪ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು ಎನ್ನಲಾಗಿದೆ.


ಕೃಷ್ಣಪ್ಪ ಅವರ ಪತ್ನಿ ಈ ಮೊದಲೇ ಮೃತಪಟ್ಟಿದ್ದರು. ಮಕ್ಕಳು ಸುಮಾರು 15 ವರ್ಷಗಳ ಹಿಂದೆಯೇ ತಂದೆಯನ್ನು ಬಿಟ್ಟು ಹೋಗಿದ್ದು, ಅಂದಿನಿಂದ ಕೃಷ್ಣಪ್ಪ ಅರ್ಕಿಜಡ್ಡದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು.

ಕೃಷ್ಣಪ್ಪ ಅವರ ತಂಗಿ ಮುತ್ತಮ್ಮ ಎಂಬವರು ಪ್ರತಿದಿನ ಅಣ್ಣನಿಗೆ ಊಟ-ತಿಂಡಿ ತಂದುಕೊಡುತ್ತಿದ್ದರು. ಇತ್ತೀಚೆಗೆ ಸುಮಾರು 15 ದಿನಗಳ ಹಿಂದೆ ಕೃಷ್ಣಪ್ಪ ಮೂಲ್ಯ ರವರು ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವ ಸಮಯ ಎಡಕೈಗೆ ಏನೋ ಕಚ್ಚಿದ ಗಾಯವಾಗಿ ಚಿಕಿತ್ಸೆ ಪಡೆಯದ ಕಾರಣ ಗಾಯ ಉಲ್ಬಣಗೊಂಡು, ಅವರು ಎಪ್ರಿಲ್ 2ರಂದು ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಹುತ್ತದಲ್ಲಿದ್ದ ಹಾವು ಅಥವಾ ಅನ್ಯ ವಿಷಜಂತು ಕಚ್ಚಿದ್ದೇ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




