ಉಜಿರೆ: ಬೆಳ್ತಂಗಡಿ: ತಾಲೂಕಿನ ಉಜಿರೆ ಗ್ರಾಮದ ಬೆಳಾಲು ಕ್ರಾಸ್ ಬಳಿ ಇರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ಸುಮಾರು 98,460 ರೂಪಾಯಿ ನಗದು ಹಣವನ್ನು ಕಳ್ಳನೊಬ್ಬ ದೋಚಿದ್ದಾನೆ.



ಉಜಿರೆಯ ಸುಪ್ರೀಮ್ ಲಾಡ್ಜ್ ಕೆಳಭಾಗದಲ್ಲಿರುವ ಜನೌಷಧಿ ಕೇಂದ್ರವನ್ನು ಗುರಿಯಾಗಿಸಿಕೊಂಡ ಒಬ್ಬಂಟಿ ಕಳ್ಳನೊಬ್ಬ, ಮೇ 29 ರ ರಾತ್ರಿ 12:40 ರಿಂದ ಮೇ 30 ರ ಬೆಳಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಶಟರ್ ಬೀಗ ಮುರಿದು ಒಳನುಗ್ಗಿದ್ದಾನೆ. ಕೌಂಟರ್ನಲ್ಲಿದ್ದ ಕ್ಯಾಶ್ ಡ್ರಾವರ್ ಒಡೆದು, ಕಳೆದ 3 ದಿನಗಳ ವ್ಯವಹಾರದ ಕಲೆಕ್ಷನ್ ಹಣವಾದ ಒಟ್ಟು ₹98,460 ರೂಪಾಯಿಯನ್ನು ಹೊತ್ತೊಯ್ದಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಶ್ವಾನದಳ:
ವಿಷಯ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳನ ಪತ್ತೆಗಾಗಿ ಮಂಗಳೂರಿನಿಂದ ಶ್ವಾನ ದಳ ಹಾಗೂ ಬೆರಳಚ್ಚು ವಿಭಾಗದ ತಜ್ಞ ಅಧಿಕಾರಿಗಳನ್ನು ಕರೆಸಲಾಗಿದ್ದು, ಸ್ಥಳದಲ್ಲಿ ಮಹತ್ವದ ಕುರುಹುಗಳನ್ನು ಕಲೆಹಾಕಲಾಗಿದೆ.
ಬಿಎನ್ಎಸ್ ಅಡಿ ಪ್ರಕರಣ ದಾಖಲು:
ಕಳ್ಳತನದ ಕುರಿತು ಉಜಿರೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಮ್ಯಾನೇಜರ್ ಅನಿತಾ ಅವರು ಮೇ 30 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಕಲಂ 305, 331(4) BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ತನಿಖೆ ಚುರುಕಿನಿಂದ ಸಾಗಿದೆ.







