ಕಡಬ: ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಪುಳಿಕುಕ್ಕು ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಅಂಬೆಕಲ್ಲು ನಿವಾಸಿ ಹೂವಪ್ಪ ಗೌಡ ಎಂಬವರ ಪುತ್ರ ಕಿಶನ್ ಎ ಹೆಚ್ (32 ವರ್ಷ) ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡು ವರ್ಷಗಳಿಂದ ಗುತ್ತಿಗಾರಿನ ಸಂಸ್ಥೆಯೊಂದರಲ್ಲಿ ಲೋನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಎರಡು ಮೂರು ತಿಂಗಳುಗಳಿಂದ ಕಿಶನ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮನೆಯವರು ಈ ಬಗ್ಗೆ ವಿಚಾರಿಸಿದರೂ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿರಲಿಲ್ಲ.
ದಿನಾಂಕ ಮಾ.21 ರಂದು ರಾತ್ರಿ ಸುಮಾರು 7:30 ಗಂಟೆಗೆ ಕಿಶನ್ ತನ್ನ ತಮ್ಮ ಸುಚಿನ್ ಗೆ ಫೋನ್ ಮಾಡಿ, “ನಾನು ಪುಳಿಕುಕ್ಕು ಸಂಕದ ಬಳಿ ವಿಷ ಸೇವಿಸುತ್ತೇನೆ” ಎಂದು ತಿಳಿಸಿದ್ದರು. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದಾಗ ಕಿಶನ್ ಪುಳಿಕುಕ್ಕು ಸಂಕದ ಬಳಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ತಕ್ಷಣ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 25 ರಂದು ಮಂಗಳೂರಿನ ಎಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಸುಮಾರು 20 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ ಕಿಶನ್, ಏ.14 ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮೃತರ ಸಹೋದರ ತನುರಾಜ್ ಎ ಹೆಚ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ UDR ಸಂಖ್ಯೆ 13/2026, ಕಲಂ : 194 BNSS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.







