ರೆಖ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಪರಿಸರ ಸಂರಕ್ಷಣೆಗೆ ಪೂರಕವಾಗಿ ನೀರಿಂಗಿಸುವಿಕೆ, ಜಲಾನಯನ ಕಾರ್ಯಕ್ರಮ, ಕಿಂಡಿ ಅಣೆಕಟ್ಟು ರಚನೆ, ಗಿಡಮರಗಳನ್ನು ಬೆಳೆಸುವುದು, ಸ್ವಚ್ಛತಾ ಕಾರ್ಯಕ್ರಮ, ಪಶ್ಚಿಮಘಟ್ಟ ಉಳಿಸಲು ಪ್ರಯತ್ನ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ಕಳೆದ 40 ವರ್ಷಗಳಿಂದ ನಡೆಸುತ್ತಾ ಬರಲಾಗಿದೆ ಎಂದು ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಯಶೋಧರ್ ಹೇಳಿದರು.

ರೆಖ್ಯ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾಗಿದ್ದ ಗಿಡ ನಾಟಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ೨೦೨೧ ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಇದುವರೆಗೆ ೧೮೧೧ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ೨,೧೬,೪೫೦ ಗಿಡಗಳನ್ನು ೧೩೫೧ ಹೆಕ್ಟೇರ್ ಕಾಡು ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ “ಶೌರ್ಯ” ವಿಪತ್ತು ನಿರ್ವಹಣಾ ಸ್ವಯಂಸೇವಕರ ಮೂಲಕ ವನಮಹೋತ್ಸವ, ಜಲಾನಯನ ಕಾರ್ಯಕ್ರಮ, ಕೆರೆಗಳ ಸುತ್ತಮುತ್ತ ಗಿಡನಾಡಿ, ಗಿಡ ಬಳ್ಳಿಗಳ ರಕ್ಷಣೆ, ಖಾಲಿ ಜಾಗದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಿಡ ನಾಟಿ, ಸಾಲು ಮರ, ದೇವರ ಕಾಡು, ನದಿ ತೀರಗಳಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಉಪ್ಪಿನAಗಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇವರು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಗಿಡ ನಾಟಿ ಮಾಡುವುದು ಮಾತೃವಲ್ಲದೇ ಗಿಡಗಳ ಪೋಷಣೆಗೂ ಆದ್ಯತೆ ನೀಡುತ್ತಿದ್ದಾರೆ. ಶೌರ್ಯ ಘಟಕದ ಸದಸ್ಯರಾದ ಚೇತನ್ ಇವರು ಕಳೆದ ಐದು ವರ್ಷಗಳ ಹಿಂದೆ ನಾಟಿ ಮಾಡಿದ್ದ ಸುಮಾರು ೧೫೦ ಗಿಡಗಳನ್ನು ಇಂದಿಗೂ ಪೋಷಣೆ ಮಾಡಿಕೊಂಡು ಬಂದಿದ್ದು ಇಂದು ನಾಟಿ ಮಾಡಿದ ಎಲ್ಲಾ ಗಿಡಗಳ ಬುಡಗಳನ್ನು ಸ್ವಚ್ಚಗೊಳಿಸಿ ಗೊಬ್ಬರ ಹಾಕುವ, ಅನಗತ್ಯ ಗಿಡಗಂಟಿಗಳನ್ನು ತೆರವು ಮಾಡುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸವನ್ನು ಎಲ್ಲರೂ ಮಾಡಬೇಕು. ಅರಣ್ಯ ಸಂರ್ವಕ್ಷಣೆಗೆ ಕೊಡುಗೆ ನೀಡಬೇಕು ಎಂದರು.
ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಕೃಷ್ಣಪ್ಪ, ಬೇಬಿ ಕಿರಣ್, ದನಂಜಯ ಶಿಬರಾಜೆ, ಗ್ರಾಮದ ಹಿರಿಯರಾದ ಆನಂದ ಗೌಡ, ಒಕ್ಕೂಟದ ಅಧ್ಯಕ್ಷರಾದ ರವೀಂದ್ರ, ಮೇಲ್ವಿಚಾರಕರಾದ ಪ್ರಿಯಾ, ಬೆಳ್ತಂಗಡಿ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಘಟಕದ ಸಂಯೋಜಕರಾದ ರಶ್ಮಿತಾ, ಘಟಕ ಪ್ರತಿನಿಧಿ ಆನಂದ್, ಶಿಶಿಲ ಅರಶಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸ್ವಯಂಸೇವಕರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಐದು ವರ್ಷದ ಹಿಂದೆ ನಾಟಿ ಮಾಡಲಾಗಿದ್ದ ೧೫೦ ಗಿಡಗಳ ರಕ್ಷಣೆ, ಬುಡ ಮಾಡುವುದು, ಗೊಬ್ಬ್ಗರ ಹಾಕುವುದು, ಅನಗತ್ಯ ಗಿಡಗಂಟಿಗಳನ್ನು ತೆರವು ಮಾಡುವುದರ ಜೊತೆಗೆ ಹೊಸದಾಗಿ ಹಣ್ಣು ಹಂಪಲುಗಳ ಗಿಡಗಳನ್ನು ಅರಣ್ಯದ ಅಂಚಿನಲ್ಲಿ ನಾಟಿ ಮಾಡಲಾಯಿತು.




