ಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಯುವತಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟ ಯುವತಿ, ಸಂಜೆಯಾದರೂ ಮನೆಗೆ ಮರಳದೆ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದ್ದಾಳೆ.
ನಾಪತ್ತೆಯಾದ ಯುವತಿಯನ್ನು ರೇಣುಕಾ ಭರ್ಮಪ್ಪ ಹರಿಜನ ಎಂಬುವವರ ಮಗಳು ಕರಿಯಮ್ಮ (21) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಕುಟುಂಬದೊಂದಿಗೆ ಮಂಗಳೂರಿನಲ್ಲಿ ವಾಸವಿದ್ದ ಇವರು, ಮೇ 8 ರಿಂದ ಮಲ್ಲಿಕಟ್ಟೆಯ ಬಳಿಯ ಹೋಟೆಲ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಮೇ 11 ರಂದು ಬೆಳಿಗ್ಗೆ 9:30ಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಕರಿಯಮ್ಮ, ಸಂಜೆವರೆಗೆ ಮನೆಗೆ ಮರಳಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಅಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ‘ತಲೆನೋವು ಇದೆ, ಮನೆಗೆ ಹೋಗುತ್ತೇನೆ’ ಎಂದು ಸಹೋದ್ಯೋಗಿ ಶಿವಮ್ಮ ಎಂಬುವವರಿಗೆ ತಿಳಿಸಿ ಹೋಟೆಲ್ನಿಂದ ಹೊರಬಂದಿರುವುದು ತಿಳಿದುಬಂದಿದೆ. ಆದರೆ ಅವರು ಮನೆಗೂ ತಲುಪಿಲ್ಲ. ಮಗಳಿಗಾಗಿ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಮಗಳು ಹಿಂತಿರುಗಿ ಬರಬಹುದೆಂದು ಕಾದು ಕುಳಿತಿದ್ದ ಪೋಷಕರು, ಇದೀಗ ಮಗಳನ್ನು ಪತ್ತೆಹಚ್ಚಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







