ಬೆಳ್ತಂಗಡಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಇಂದಬೆಟ್ಟು ಇದರ ವಲಯದ ಸಭೆಯು ಬೆದ್ರಬೆಟ್ಟು ಶ್ರೀ ವಿಘ್ನೇಶ್ವರ ಭಜನಾ ಮಂದಿರದಲ್ಲಿ ವಲಯಾಧ್ಯಕ್ಷರಾದ ಶಶಿಧರ ಗೌಡ ಮನ್ನಡ್ಕ ಇವರ ಅಧ್ಯಕ್ಷತೆಯಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಯತೀಶ್ ಕೆ ಬಳೆಂಜ ಅವರು ಮಾತನಾಡಿ ವಲಯದಲ್ಲಿ ಎಲ್ಲಾ ಭಜನಾ ಮಂಡಳಿಗಳನ್ನು ಒಗ್ಗೂಡಿಸಬೇಕು.
ಭಜನೆಯನ್ನು ನಾನು ನನ್ನದು ಎನ್ನುವುದನ್ನು ಬಿಟ್ಟು ನಾವು ನಮ್ಮದು ಎನ್ನುವ ಭಾವನೆಯಿಂದ ದೇವರಿಗೆ ಸಮರ್ಪಣೆ ಮಾಡಬೇಕು. ಭಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಯಾರನ್ನು ಮೆಚ್ಚಿಸಲು ಭಜನೆಯು ಆಡಂಬರಕ್ಕೆ ಸೀಮಿತವಾಗದೆ ಶ್ರದ್ಧಾ ಭಕ್ತಿಯಿಂದ ಆಯೋಜಿಸುವ ಕಾರ್ಯಕ್ರಮವಾಗಬೇಕು ಎಂದರು.
ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ ಚಂದ್ರಶೇಖರ ಸಾಲ್ಯಾನ್ ರವರು ಭಜನಾ ಮಂಡಳಿಗಳ ಪದಾಧಿಕಾರಿಗಳ ಹಾಗೂ ಸದಸ್ಯರುಗಳೊಂದಿಗೆ ಸಂವಾದ ನಡೆಸಿ ಅವರಿಗೆ ಕೆಲವು ಸಲಹೆಗಳನ್ನು ನೀಡಿದ ನಂತರ ವಲಯದಲ್ಲಿ ಭಜನಾ ಪರಿಷತ್ತು ನಿಂತ ನೀರಾಗದೆ ಹರಿಯುತ್ತಿರುವ ನೀರಾಗಬೇಕಾದರೆ ತಮ್ಮೆಲ್ಲರ ಸಹಕಾರ ಅತ್ಯವಶ್ಯಕವಾಗಿದೆ.
ಮುಂದಿನ ದಿನಗಳಲ್ಲಿ ಮಲಯ ಭಜನಾ ಪರಿಷತ್ತು ಎನ್ನುವುದು ಕೇವಲ ಭಜನೆಗೆ ಸೀಮಿತವಾಗದೆ ವಲಯದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಾದ ಆರೋಗ್ಯ ಮಾಹಿತಿ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಉದ್ಯೋಗ ಮಾಹಿತಿ ಹಾಗೂ ಇನ್ನಿತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ವಲಯ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಭಜನಾ ಕಮ್ಮಟೋತ್ಸವದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ಅದಕ್ಕೆ ಶಿಬಿರಾರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ತಿಳಿಸಿದರು ಮತ್ತು ವಲಯದಲ್ಲಿ ಕುಳಿತು ಭಜನೆ ಮಾಡುವಂತಹ ಎಲ್ಲಾ ತಂಡಗಳಿಗೆ ಪಕ್ಕದ ದೇವಸ್ಥಾನದಲ್ಲಿ ಒಂದು ದಿನ ಕುಳಿತು ಭಜನೆ ಮಾಡುವ ಕಾರ್ಯಕ್ರಮವನ್ನು ನಡೆಸಲು ವಲಯ ಭಜನಾ ಪರಿಷತ್ತಿನ ವತಿಯಿಂದ ದಿವಸ ನಿಗದಿ ಮಾಡುವಂತೆ ತಿಳಿಸಿದರು.
ಹಿರಿಯರಾದ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣಗೌಡ ಇರ್ತಿಲಾಲ್ ರವರು ತನ್ನ ಬಾಲ್ಯದ ಭಜನೆಯ ಮತ್ತು ಈಗಿನ ಭಜನೆಯ ಬಗ್ಗೆ ಮೆಲಕು ಹಾಕುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಭಜನಾ ಪರಿಷತ್ತಿನ ಈ ಕಾರ್ಯಕ್ರಮವನ್ನು ಶ್ಲಾಗಿಸುತ್ತಾ ಇದಕ್ಕೆ ತನ್ನ ಸಂಪೂರ್ಣ ಸಹಕಾರವನ್ನು ನೀಡುವ ಭರವಸೆ ನೀಡಿದರು.
ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿಯಾದ ಪಿ ಚಂದ್ರಶೇಖರ ಗೌಡ ಪ್ರಾಸ್ತಾವಿಕವಾಗಿ ಮಾತಾಡುತ್ತಾ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಲಯದ ಅಧ್ಯಕ್ಷರಾದ ಶ್ರೀ ಶಶಿಧರ ಗೌಡ ಮನ್ನಡ್ಕ ರವರು ವಲಯ ಪರಿಷತ್ತಿಗೆ ಎಲ್ಲಾ ಭಜನಾ ಮಂಡಳಿಗಳ ಸಹಕಾರವನ್ನು ಬಯಸುತ್ತಾ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಭಜನೆ ಯೊಂದಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ರವಿರಾಜ್ ಚಾರ್ಮಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಸಲಹೆಯಂತೆ ಇಂದಬೆಟ್ಟು ವಲಯ ಪರಿಷತ್ತಿಗೆ ಗೌರವ ಸಲಹೆಗಾರರನ್ನು ನೇಮಿಸುವ ನಿರ್ಣಯ ಕೈಗೊಳ್ಳಲಾಯಿತು.
ಅದರಂತೆ ಖ್ಯಾತ ಧಾರ್ಮಿಕ ಮುಖಂಡರಾದ ಡಾ! ಪ್ರದೀಪ್ ಎ.ನಾವೂರು. ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣಗೌಡ ಇರ್ತಿಲಾಲ್. ಕೂಡಬೆಟ್ಟು ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ವಾಸುದೇವ ರಾವ್ ಕಕ್ಕೇನೇಜಿ ಕೂಕ್ಕಾವುರನ್ನು ಸರ್ವಾನುಮತದಿಂದ ಆಯ್ಕೆಗಳು ಮಾಡಲಾಯಿತು. ಸಭೆಯಲ್ಲಿ ವಲಯದ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಭಜಕರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ಸುನಿತಾರವರು ಸ್ವಾಗತಿಸಿದರು ಕೊನೆಯಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ಶೈಲ ರವರು ವಂದಿಸಿದರು.
ರಾಷ್ಟ್ರಗೀತೆಯೊಂದಿಗೆ ವಲಯ ಸಭೆ ಮುಕ್ತಾಯವಾಯಿತು.




