ಉಜಿರೆ : ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಮಂಗಳೂರು ವಿಭಾಗದ ಅಂತರ್ ಕಾಲೇಜುಗಳ ಕ್ರಿಕೆಟ್ ಪಂದ್ಯಾಟವು ನಿಟ್ಟೆಯಲ್ಲಿ ಜರಗಿತು, ಸಕ್ರೀಯವಾಗಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪುರುಷರ ಕ್ರಿಕೆಟ್ ತಂಡವು ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಸೆಮಿಫೈನಲ್ ಹಂತದ ಪಂದ್ಯದಲ್ಲಿ ಉಜಿರೆ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ತಂಡವು ಜಿಲ್ಲೆಯ ಕೆನರಾ ಇಂಜಿನಿಯರಿಂಗ್ ಕಾಲೇಜ್ ತಂಡದ ವಿರುದ್ಧ ರೋಚಕ (99/10 – 101/9 ) 1 ವಿಕೆಟ್ ಜಯ ಸಾಧಿಸಿ ಫೈನಲ್ ಪ್ರವೇಶ ಪಡೆಯಿತು. ಬಳಿಕ ಫೈನಲ್ ಹಂತದ ಪಂದ್ಯದಲ್ಲಿ
ಸಾಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ತಂಡದ ವಿರುದ್ಧ ಸೆಣಸಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಈ ಮೂಲಕ ಶಿವಮೊಗ್ಗದಲ್ಲಿ ನಡೆಯಲಿರುವ ವಿಟಿಯು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ತಂಡವು ಆಯ್ಕೆಗೊಂಡಿದೆ. ಟೂರ್ನಮೆಂಟ್ನ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಎಸ್.ಡಿ.ಎಂ ತಂಡದ ಗೌತಮ್ ಆರ್. ಎಂ. ಪಡೆದುಕೊಂಡರು. ತಂಡಕ್ಕೆ ಉಜಿರೆಯ ತಾಂತ್ರಿಕ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಭಾಕರ್ ತರಬೇತಿಯನ್ನು ನೀಡಿರುತ್ತಾರೆ.
ಪ್ರಶಸ್ತಿ ವಿಜೇತ ತಂಡದಲ್ಲಿ ವಿದ್ಯಾರ್ಥಿಗಳಾದ ಅಯಾನ್ ಖಾನ್ (ನಾಯಕ), ಸಾಹಿಲ್ ಬೋವಿ, ಅಭಯಚಂದ್ರ, ಆರ್ಯನ್ , ಶ್ರೀರಾಮ್ , ಪ್ರಜ್ವಲ್ , ಆಕಾಶ್ , ಶ್ರೇಯಸ್, ಗೌತಮ್ , ಬಸವರಾಜ್ , ಶಿಶಿರ್ , ತ್ರೈಲೋಕ್ಯಾ , ವಿವೇಕ್
, ಸಾತ್ವಿಕ್ ಮತ್ತು ವಿಕ್ರಮ್ ಭಾಗವಹಿಸಿರುತ್ತಾರೆ.
ವಿಜೇತ ತಂಡಕ್ಕೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೋ. ಅಶೋಕ್ ಕುಮಾರ್ ಟಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಸೇರಿದಂತೆ ಕಾಲೇಜಿನ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.







