ತ್ರಿಶೂರ್: ಓಣಂ ಹಬ್ಬ ಮತ್ತು ಸಂಬಂಧಿಕರ ಮದುವೆಗಾಗಿ ವಿದೇಶದಿಂದ ಊರಿಗೆ ಬಂದಿದ್ದ ಕುಟುಂಬವೊಂದರ ಸಂತಸದ ಕ್ಷಣಗಳು ಕ್ಷಣಾರ್ಧದಲ್ಲಿ ಶೋಕಸಾಗರದಲ್ಲಿ ಮುಳುಗಿವೆ.

ಓಣಂ ಹಬ್ಬ ಹಾಗೂ ಸಂಬಂಧಿಕರ ಮದುವೆಗಾಗಿ ಗಲ್ಫ್ನಿಂದ ಊರಿಗೆ ಬಂದಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಘಟನೆ ಕೇರಳದ ಕುನ್ನಂಕುಲಂನಲ್ಲಿ ನಡೆದಿದೆ.

ತ್ರಿಶೂರ್ ನಿವಾಸಿ ಮುನೀರ್ (39), ಪತ್ನಿ ಶಫಾ ಮತ್ತು ಮೂರು ವರ್ಷದ ಮಗ ಮುಹಮ್ಮದ್ ಅಮೀನ್ ಮೃತಪಟ್ಟವರು. ಮದುವೆ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ, ಕುನ್ನಂಕುಲಂ-ಗುರುವಾಯೂರ್ ರಸ್ತೆಯಲ್ಲಿ ಫೋನ್ ಕರೆ ಬಂದಿದ್ದರಿಂದ ಬೈಕ್ ನಿಲ್ಲಿಸಿದ್ದರು. ಈ ವೇಳೆ ಅತಿಯಾದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ತೀವ್ರವಾಗಿ ಗಾಯಗೊಂಡ ಮೂವರೂ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.



ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಘಟನೆ ಬಳಿಕ ಪರಾರಿಯಾದ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದ್ದು, ಕಾರಿನಲ್ಲಿದ್ದ ಉಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮರಳಿ ಗಲ್ಫ್ಗೆ ತೆರಳಬೇಕಿದ್ದ ಕುಟುಂಬ ದಾರುಣವಾಗಿ ಸಾವನ್ನಪ್ಪಿರೋದು ಇಡೀ ಊರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.





